ಆರೋಗ್ಯದಾಯಕ ನೆಲನೆಲ್ಲಿ ಸೊಪ್ಪಿನ ತಂಬುಳಿ

ನೆಲನೆಲ್ಲಿಯ ಸೊಪ್ಪು ಹಲವು ವಿಧದಲ್ಲಿ ಉಪಯುಕ್ತವಾಗಿದೆ. ಕಾಮಾಲೆಗೆ, ಉದರಶೂಲೆಗೆ ಶ್ಲೇಷ್ಮಾತೀಸಾರಕ್ಕೆ ಹಾಗೂ ಕಣ್ಣು ನೋವಿಗೆ ಇದರ ಸೊಪ್ಪು ದಿವ್ಯೌಷಧಿಯಾಗಿದೆ. ಅಲ್ಲದೇ ಪಿತ್ತಜನಕಾಂಗದ ಸಮಸ್ಯೆಗಳಿಗೂ ಇದನ್ನು ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವೈದ್ಯ ಎ.ಅರ್.ಎಂ.ಸಾಹೇಬ್ ಅವರ "ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು" ಎಂಬ ಪುಸ್ತಕವನ್ನು ಓದಬಹುದು. ನೆಲನೆಲ್ಲಿಯ ಚಿತ್ರಗಳಿಗಾಗಿ ಈ ಕೆಳಗಿನ ಲಿಂಕ್ಅನ್ನು ನೋಡಿ.
ನೆಲನೆಲ್ಲಿ ತಂಬುಳಿಗೆ ಬೇಕಾಗುವ ಸಾಮಗ್ರಿಗಳು-
* ನೆಲನೆಲ್ಲಿ ಸೊಪ್ಪು - ಒಂದು ಹಿಡಿ ಅಥವಾ ಮುಷ್ಟಿಯಷ್ಟು
* ಜೀರಿಗೆ - ೧/೪ ಚಮಚ
* ಬಿಳೇ ಎಳ್ಳು - ೧/೪ ಚಮಚ
* ಕರಿಮೆಣಸಿನ ಕಾಳು(ಪೆಪ್ಪರ್) - ೨-೩
* ಇಂಗು - ಚಿಟಿಗೆಯಷ್ಟು
* ಕಾಯಿತುರಿ - ೧/೪ ಭಾಗ
* ಕಡೆದ ಮಜ್ಜಿಗೆ - ಒಂದು ಲೋಟ
* ಬೆಲ್ಲ - ರುಚಿಗೆ ತಕ್ಕಷ್ಟು (ಸಿಹಿ ಆಗದವರು ಬೆಲ್ಲವನ್ನು ಹಾಕದೆಯೂ ಮಾಡಬಹುದು)
* ಉಪ್ಪು - ರುಚಿಗೆ ತಕ್ಕಷ್ಟು
* ತುಪ್ಪ - ೧-೨ ಚಮಚ
ಮಾಡುವ ವಿಧಾನ
* ಮೊದಲಿಗೆ ನೆಲನೆಲ್ಲಿ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು.
* ಬಾಣಲೆಯಲ್ಲು ತುಪ್ಪವನ್ನು ಹಾಕಿ ಜೀರಿಗೆ, ಎಳ್ಳು, ಕರಿಮೆಣಸಿನ ಕಾಳು ಹಾಗೂ ಇಂಗನ್ನು ಹಾಕಿ ಹುರಿಯಬೇಕು. ಹಾಕಿದ ಪದಾರ್ಥ ಚಟಗುಡುತ್ತಲೇ, ಇದಕ್ಕೆ ಹೆಚ್ಚಿಟ್ಟ ನೆಲನೆಲ್ಲಿ ಸೊಪ್ಪನ್ನೂ ಹಾಕಿ ಚೆನ್ನಾಗಿ ಹುರಿದು ತಣಿಸಬೇಕು.
* ಚೆನ್ನಾಗಿ ತಣಿದ ನಂತರ ಕಾಯಿತುರಿಯೊಂದಿಗೆ ಬೀಸಿ, ಸೋಸಿ ರಸವನ್ನು ಹಿಂಡಬೇಕು. ಜಿಗುಟನ್ನು ತೆಗೆಯಬೇಕು.
* ಸೋಸಿದ ರಸಕ್ಕೆ ಕಡೆದ ಮಜ್ಜಿಗೆ, ಉಪ್ಪು ಹಾಗೂ ಬೆಲ್ಲವನ್ನು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರ ತಂಬುಳಿ ತಯಾರೆನ್ನಬಹುದು.
ನೆಲನೆಲ್ಲಿ ಸೊಪ್ಪಿನಿಂತ ಚಟ್ನಿಯನ್ನೂ ತಯಾರಿಸಬಹುದು. ಬಹೋಪಯೋಗಿಯಾಗಿರುವ ಇದು ಸುಲಭದಲ್ಲಿ
ಬೆಳೆಯುವಂತಹದ್ದೂ ಆಗಿದೆ.
Contributed By:
Rajesh Hegde (hegderajesh33@gmail.com)
No comments:
Post a Comment